Thursday, September 20, 2012

ಮಳೆಗಾಲದ ಒಂದು ದಿನ !

ಅಡಿಗೆ ಮನೆಯಲ್ಲಿನ ಪಾತ್ರೆಗಳ ಟಣ-ಟಣ ಸದ್ದು ಸುಪ್ರಭಾತವನ್ನು ಹಾಡಿತ್ತು. ಕತ್ತಲು ಇನ್ನೂ ಕರಗಿರಲಿಲ್ಲ. ರಾತ್ರಿಯಿಡೀ ಸುರಿಯುತಿದ್ದ ಮಗೆ ಮಳೆ ಇನ್ನೂ ಬಿಟ್ಟಿರಲಿಲ್ಲ.
ಮುಂಜಾನೆಯ ಚುಮು ಚುಮು ಚಳಿಯಲ್ಲಿ, ಬೆಚ್ಚನೆಯ ಹಾಸಿಗೆಯ ಸುಖನಿದ್ರೆ ಆಗ ತಾನೇ ಮುಗಿದಿತ್ತು.

ಚಳಿಯಿಂದ ತಪ್ಪಿಸಿ ಕೊಳ್ಳಲೋ ಎಂಬಂತೆ ಒಲೆಯಲ್ಲಿ ಸೌದೆಗಳು ಬೆಂಕಿಯ ಮೊರೆಹೊಗಿದ್ದವು! ಹಂಡೆಯಲ್ಲಿ ಬೆಚ್ಚಗಿನ ನೀರು ಮರಗಟ್ಟಿದ್ದ ಕೈ-ಕಾಲುಗಳಿಗೆ ಮರುಜೀವ ನೀಡಿತ್ತು!
ಒಲೆಯಿಂದ ಹೊರಹೊಮ್ಮಿದ ತಿಳಿಹೊಗೆ , ಹಸಿರು ಹೊದ್ದ ಭೂಮಿಗೂ, ಕರಿಮೋಡಗಳನ್ನು ಹೊದ್ದ ಬಾನಿಗೂ ಸೇತುವೆಯನ್ನು ಕಟ್ಟಿತ್ತು!  ಬಿಸಿ ಬಿಸಿ ಕಾಫಿ ದಿನಕ್ಕೆ ಶುಭಾರಂಭ ಕೋರಿತ್ತು.



ಮಣ್ಣ ಕೊಳೆಯನ್ನ ತೊಳೆಯಲೋ ಎಂಬಂತೆ ಧೋ ಎಂದು ಮಳೆ ಸುರಿಯುತ್ತಿತ್ತು.
ಕೊತ-ಕೊತ ಕುದಿಯುವ ನೀರಿನ ಅಭ್ಯಂಜನ ಮೈ-ಮನಗಳ ಕೊಳೆಯನ್ನ ತೊಳೆದು ,ಹೊಸ ಹುರುಪನ್ನು ಮೂಡಿಸಿತ್ತು!

ಹೊರಗೆ , ಮುಂಗಾರ ಮೋಡಗಳ ಗೋಡೆಯನ್ನ ಸೀಳಿ , ಭೂಮಿಯನ್ನ ಮುತ್ತಿಡಲು ಸೂರ್ಯರಶ್ಮಿಗಳ ಅವಿರತ ಪ್ರಯತ್ನ ಸೋತಿತ್ತು. ಮಳೆ ಒಂದೇ ಸಮನೆ ಶ್ರುತಿ ಹಿಡಿದು ಹಾಡಿತ್ತು.
ಒಣಗಿ ಮೂಲೆ ಹಿಡಿದಿದ್ದ ಬಣ್ಣ ಬಣ್ಣದ ಛತ್ರಿಗಳು ಮತ್ತೆ ತಮ್ಮ ತಲೆಯನ್ನೆತ್ತಿದ್ದವು. ಕಂಬಳಿ-ಗೊರಬುಗಳು ಮತ್ತೆ ಮಳೆಗೆ ಮೈಒಡ್ಡಿದ್ದವು!
ಮಳೆಗಾಲದ ಚಟುವಟಿಕೆಗಳು ಬಸವನಹುಳುವಿನ ವೇಗದಲ್ಲಿ ಚಲಿಸಿತ್ತು !

ನೀರು , ಹಸಿರು ಸಂತೋಷವನ್ನು ತಂದಿತ್ತು . ಬರಿಗಾಗಿದ್ದ ಭೂತಾಯಿಯ ಮಡಿಲು ಮತ್ತೆ ತುಂಬಿತ್ತು. 
ಭೂಮಿಗೆ ಸ್ವರ್ಗವೇ ಇಳಿದಿತ್ತು ! ಗೊಂದಲಮಯ ಬದುಕಿನಲ್ಲಿ ಹೊಸ ಉತ್ಸಾಹ ತಲೆಎತ್ತಿತ್ತು. ಸಮೃದ್ದಿ ಚಿಮ್ಮಿತ್ತು.

ಕೆಸು, ಕಳಲೆ, ಹಲಸಿನ ಘಮ ಮಳೆ ಮಾರುತದಲ್ಲಿ ಬೆರೆತು ಹೋಗಿತ್ತು.
ಶಾಂತವಾಗಿ ಹನಿಯುತ್ತಿದ್ದ ಹೂಮಳೆ,ಮಧ್ಯಾಹ್ನ್ನದ ನಿದ್ರೆಗೆ ಲಾಲಿ ಹಾಡಿತ್ತು .



ಎಚ್ಚೆತ್ತ ಮನದಲ್ಲಿ, ಅದೇನೋ ಏಕಾಂತ ಕಾಡಿತ್ತು. ಚಾವಡಿಯಲ್ಲಿ ಕೂತು, ಯಾರದೋ ಬರವಿಗೆ ಬಾಗಿಲು ಕಾದಿತ್ತು.
ಆಗ ತಾನೇ ಕರಿದ ಹಲಸಿನ ಹಪ್ಪಳ , ಸಂಜೆಯ ಒಂಟಿತನಕ್ಕೆ ಜೊತೆ ನೀಡಿತ್ತು !

ಕತ್ತಲೆಯ ಹೊದಿಕೆ ಬಾನ್-ಭುವಿಗಳನ್ನು ಒಂದಾಗಿಸಿತ್ತು .
ಹತ್ತಾರು ಬಗೆಯ ಹುಳಗಳು , ದೀಪದ ಬೆಳಕಿಗೆ ಸೆಳೆದು, ಮೈ ಸುಟ್ಟುಕೊಂಡಿದ್ದವು.

ದಿನವಿಡೀ ಸುರಿದ ಮಳೆ, ಸ್ವಲ್ಪ ಹೊತ್ತಿನಿಂದ ತನ್ನ ಹಾಡಿಗೆ ವಿರಾಮ ಕೊಟ್ಟಿತ್ತು.
ಅರೆ ಕ್ಷಣ ಮೂಡಿದ ನೀರವ ಮೌನ  ನೂರಾರು ಜೀರುಂಡೆಗಳ ಕೂಗಿಗೆ ನಲುಗಿತ್ತು .
ಅದನ್ನು ಸಹಿಸಲಾರದೆ ಬಾನು ಗುಡುಗಿತ್ತು.
ಮಳೆ ಮತ್ತೆ ತನ್ನ ರಾಗವನ್ನು ಹಾಡಿತ್ತು....